Saturday 17 March 2012

ಅಪ್ಪನ ನಿವೃತ್ತಿಯ ನಂತರ


ಚಿತ್ರಕೃಪೆ: ಅಂತರ್ಜಾಲ
ಮೊನ್ನೆ ಯಾವಗಲೋ ಮನೆಗೆ ಫೋನ್ ಮಾಡಿದ್ದೆ. ಅಮ್ಮ ಮಾತಿನ ಮಧ್ಯದಲ್ಲಿ "ಅಪ್ಪ ರಿಟೈರ್ಡ್ ಆಗುತ್ತಿದ್ದರಲ್ಲಾ ಈ ತಿಂಗಳ ಕೊನೆಗೆ, ಮೊನ್ನೆ ತಾಲೂಕು ಮಟ್ಟದ ಶಿಕ್ಷಕರ ಮೀಟಿಂಗ್ ನಲ್ಲಿ ಎಲ್ಲರೂ ಇವರನ್ನು ಹೊಗಳಿದ್ದೇ ಹೊಗಳಿದ್ದು" ಎಂದಾಗ ನನಗೆ ಇವಳು ಗಂಡನನ್ನು ಹೋಗಳಿದರೆಂಬ ಖುಷಿಯಲ್ಲಿದ್ದಳಾ ಅಥವಾ ಗಂಡ ನಿವೃತ್ತಿಯ ಬಳಿಕ ಏನು ಮಾಡಬಹುದು ಎಂಬ ಆತಂಕದಲ್ಲಿದ್ದಳಾ ಎಂದು ತಿಳಿಯಲಿಲ್ಲ. ಹಾಗೆ ಎಲ್ಲರೂ ಹೊಗಳಿದಾಗಲೂ  ನನ್ನ ಅಪ್ಪನ ಉತ್ತರವೇನೂ ಔಪಚಾರಿಕ ಧನ್ಯವಾದಪೂರ್ವಕ ನಗೆಯಾಗಿರಲಿಲ್ಲ. ಇವರು ಆ ಸಭೆಯಲ್ಲಿ "ನನ್ನ ಬಗ್ಗೆ ಹಿಂದಿನಿಂದ ಯಾರು ಏನೆಂದು ಆಡಿಕೊಂಡಿದ್ದಾರೋ ತಿಳಿಯದು,  ಆದರೆ ನನ್ನ ಮುಂದಂತೂ ಎಲ್ಲರೂ ನನಗೆ  ಗೌರವ ಸಲ್ಲಿಸಿದ್ದಾರೆ. ಅದಕ್ಕಾಗಿ ನಾನು ಕೃತಜ್ಞ" ಅಪ್ಪ ಇರೋದೇ ಹಾಗೆ, ಮಾತು ನೇರ, ಮಾತಿಗಿಂತ ಕೃತಿ ಮತ್ತೂ ನೇರಾನೇರ. ಅದಕ್ಕೇ ಅವರಿಗೆ ಅಷ್ಟು ಸ್ಪಷ್ಟವಾಗಿ ಗೊತ್ತಿರುವುದು, ಇಂದು ಹೀಗೆ ಹೊಗಳುತ್ತಿರುವವರೆಲ್ಲ ಅದನ್ನು ಮನಃಸ್ಪೂರ್ವಕವಾಗಿ ಹೇಳುತ್ತಿಲ್ಲ ಎಂದು. ಅದನ್ನವರು ಆಶಿಸಿದವರೂ ಅಲ್ಲ ಬಿಡಿ.


ಅಮ್ಮ ಹೇಳಿದ ಇವರು ಕೊಟ್ಟ ಉತ್ತರವಲ್ಲ ನನಗೆ ಅಚ್ಚರಿಯೆನಿಸಿದ್ದು, ಹಾಗೆ ಅವರು ಹೇಳದೇ ಹೋಗಿದ್ದರೇ ಆಶ್ಚರ್ಯವಾಗುತ್ತಿತ್ತೇನೋ. ಈ ೨೨ ವರ್ಷಗಳಲ್ಲಿ ಮನೆ ಎಂದರೆ ಹೀಗೆ ಇತ್ತು, ಅಪ್ಪ ಅಮ್ಮ ಬೆಳಿಗ್ಗೆಯೆಲ್ಲ ಶಾಲೆಯಲ್ಲಿ ಇರುವುದು, ಸಂಜೆಯಾಗುವ ಮುಂಚೆ ಅಮ್ಮ ಬಂದು ತಿಂಡಿ ಏನಾದರೂ ಕೊಡುವುದು, ಅದು ತಿಂದು ಜೀರ್ಣವಾಗುವ ಹೊತ್ತಿಗೆ ಸೂಅರ್ಯ ಮುಳುಗುವ ಸಮಯದಲ್ಲಿ ಅಪ್ಪ ಮನೆಗೆ ಬರುವುದು, ಅಲ್ಲಿಯವೆರೆಗಿದ್ದ ಸ್ವೇಚ್ಚೆ ಬರೀ ಸ್ವಾತಂತ್ರ್ಯಕ್ಕೆ ಮಿತಿಯಾಗುವುದು,ಪ್ರತೀ ಬುಧವಾರ ಅವರು ಶಾಲೆಯಿಂದ ಬರುವಾಗ ಸಂತೆಗೆ ಹೋಗಿ ಚೀಲದ ತುಂಬಾ ತರಕಾರಿ ತರುವುದು,ಚಿಕ್ಕವನಾಗಿದ್ದಾಗ ಚೀಲದ ತುಂಬ ತರಕಾರಿ ತರದಿದ್ದರೆ ನಾನು ಮಾಡುತ್ತಿದ್ದ ಗಲಾಟೆಯನ್ನು ನೆನಪಿಸುವುದು,  ವೀಕೆಂಡ್ ಬಂತೆಂದರೆ ಅಪ್ಪ ಊರಿಗೆ(ಕರ್ಕಿಗೆ, ನಮ್ಮ ನಿಜವಾದ ನೇಟಿವ್) ಹೋಗುವುದು, ಬರುವಾಗ ಏನಾದರೂ ತಿಂಡಿಯನ್ನು ತರುವುದು.ಅದಕ್ಕಾಗಿ ಕಾತರದಿಂದ ಕಾಯುವುದು.  ಇವೆಲ್ಲಾ ಮುಗಿದು ಹೋಗುತ್ತದೆಯೇ ಇನ್ನು? ಮತ್ತೆ ಸಿಗಲಾರೆವೇ ಈ ರೊಟೀನ್ ಬೋರಿಂಗ್ ಕ್ಷಣಗಳು?


ಅಪ್ಪನ ಗುರುತಿರುವುದೇ ಹಾಗೆ, ರಾಮ ಮಾಸ್ತರು ಎಂದು, ಆರ್. ಜಿ. ಹೆಗ್ಡೆ ಮೇಷ್ಟ್ರು ಎಂದು. ಶಿಕ್ಷಕರಲ್ಲದ ಬರೀ 'ರಾಮ ಹೆಗಡೆ'ಯವರನ್ನು ಎಷ್ಟು ಜನ ಬಲ್ಲರೋ ನಾನು ತಿಳಿಯೆ. ನಾಲ್ಕು ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ  ಬಿದ್ದಂತೆ ಆಗಿದ್ದ  ಕುಟುಂಬದ ಅಪ್ಪ ಮುಂದೆ ಶಿಕ್ಷಕರಾಗಿ ಮಕ್ಕಳಿಬ್ಬರನ್ನೂ ಇಂಜಿನಿಯರಿಂಗ್ ಓದಿಸಿಬಿಡುತ್ತಾರೆ ಎಂದರೆ ಉಳಿದಿವರಿಗಿರಲಿ ಸ್ವತಃ ಅವರ ತಾಯಿಗೆ ನಂಬಲಾಗುತ್ತಿರಲಿಲ್ಲವೇನೋ, ಆಗ. ಆದರೆ ಅವರಿಗೆ ಒಂದು ಗುರಿಯಿತ್ತು, ಸಾಧಿಸೋ ಛಲವಿತ್ತು, ಸಾಧಿಸಲೇಬೇಕಾದ ಅವಶ್ಯಕತೆಯಿತ್ತು, ಹೊರಲೇಬೇಕಾದ ಹಿರಿಮಗನ ಜವಾಬ್ದಾರಿಯಿತ್ತು, ಎಲ್ಲಕ್ಕಿಂತ ಮಿಗಿಲಾಗಿ ಆ ಪ್ರತಿಭೆಯಿತ್ತು. ಕೈಯ್ಯಲ್ಲಿ ನಯಾಪೈಸೆ ದುಡ್ಡಿರಲಿಲ್ಲ, ಅಕ್ಷರಶಃ. ಬದುಕಿಗೆ ಆಧಾರವಾಗಿ, ಮನೆಯಲ್ಲಿ ಒಂದು ಎಮ್ಮೆಯಿತ್ತು. ಹಾಲು ಕರೆದು ಮಾರುವ ಕೆಲಸವನ್ನು ಮಾಡಿದರು, ಅಡಿಗೆಯನ್ನು ಕಲಿತು ಜನಮೆಚ್ಚುವ ಹಾಗೆ ಮಾಡಿದರು. (ಈಗಲೂ ಸುತ್ತಮುತ್ತಲ ಪ್ರದೇಶದಲ್ಲಿ ಅನ್ನದ ಕೇಸರೀಬಾತಿಗೆ ಹದ ಹಾಕಲು ರಾಮ ಮಾಸ್ತರೇ ಬೇಕು.) ಬೀದಿದೀಪದಲ್ಲಿ ಓದುವುದೊಂದನ್ನು ತಪ್ಪಿಸಿಕೊಂಡರು, ಕೇರಿಯಲ್ಲೆಲ್ಲೂ ಬೀದಿದೀಪವೇ ಇರದೇ ಹೋದರೆ ಅವರಾದರೂ ಹೇಗೆ ಬೀದಿದೀಪದಲ್ಲಿ ಓದಿಯಾರು. ಏನೆ ಇರಲಿ, ನಿಜವಾಗಿಯೂ ಬಹಳವೆಂದರೆ ಬಹಳವೇ ಕಷ್ಟಪಟ್ಟಿದ್ದರು ಅಪ್ಪ ಆಗ. ರಾಮಣ್ಣನ ಮಗ ಎಂಬ ಒಂದೇ ಕಾರಣಕ್ಕೆ ಏನನ್ನಾದರೂ ಮಾಡಬಲ್ಲ ಈತ ಎಂದು ಕರ್ಕಿಯಲ್ಲಿ ನನ್ನ ಹಿಂದೆಯೇ ಜನ ಮಾತನಾಡುವುದನ್ನು ನಾನು ಕೇಳಿದ್ದೇನೆ


ಅದೆಲ್ಲ ಬಿಡಿ, ಅಪ್ಪ ಇನ್ನು ಶಾಲೆಗೆ ಹೋಗುವುದಿಲ್ಲ ಎಂಬ ಸರಳಸತ್ಯವನ್ನು ನನ್ನಿಂದ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಇನ್ನು ಏನು ಮಾಡಬಹುದು, ಎಂದೂ ಟಿ. ವಿ. ನೋಡಿದವರಲ್ಲ(ವಾರ್ತೆಗಳನ್ನು ಬಿಟ್ಟರೆ), ಸುಮ್ಮನೇ ಕುಳಿತು ಪಟ್ಟಂಗ ಹೊಡೆದವರಲ್ಲ, ಸಮಯ ಕೊಲ್ಲಲು ಕಾಫಿ, ಟೀಯನ್ನೋ ಎಲೆ ಅಡಿಕೆಯನ್ನೋ ತಿಂದವರಲ್ಲ, ಆಚೀಚೆ ಮನೆಯವರ ಬಳಿಯೂ ಅವಶ್ಯಕತೆಗಿಂತ ಹೆಚ್ಚು ಮಾತನಾಡಿದವರಲ್ಲ, ಕಥೆ ಕಾದಂಬರಿಯನ್ನು ಓದಿದ ಅಭ್ಯಾಸವಿಲ್ಲ. ಹೇಗೆ ಸಮಯ ಹೋಗುತ್ತಿತ್ತು ಅವರಿಗೆ? ಕೆಲಸ, ಕೆಲಸ, ಕೆಲಸ. ಒಂದಲ್ಲ ಒಂದು ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡು ಬಿಸಿಯಾಗಿದ್ದ ಜೀವವದು. ಶಾಲೆಯಿಂದ ಬರುವುದೇ ತಡವಾಗಿ, ಬಂದ ಮೇಲೂ ಸುಮ್ಮನೇ ಕೂತವರಲ್ಲ. ಪ್ರತೀ ಸಂಜೆಯಿಡೀ ಮಾಡುವಂತಹ ಏನಾದರೂ ಕೆಲಸವನ್ನು ದಿನವೂ ತಲೆಯಲ್ಲಿ ಇಟ್ಟುಕೊಂಡೇ ಇರುತ್ತಿದ್ದರು. ಆದರೆ ಇನ್ನು ಮುಂದೆ? ಏನೋ ಗೊತ್ತಿಲ್ಲ. ಜೀವನದಲ್ಲಿ ಏನೇನನ್ನೋ ಕಂಡಿರುವವರಿಗೆ ನಿವೃತ್ತ ಜೀವನಕ್ಕೆ ಹೊಂದಿಕೊಳ್ಳುವುದೇನೂ ದೊಡ್ಡ ವಿಷಯವಾಗದಿರಬಹುದು, ಆದರೆ ಮನೆಯಲ್ಲಿ ನಮಗೆ ಅದು ಒಂಥರಾ ಕಲ್ಪನೆಗೆ ದಕ್ಕದ್ದು, ಸದ್ಯದ ಮಟ್ಟಿಗೆ.

ಏನೇ ಆಗಲೀ, ಅಪ್ಪ ನಿವೃತ್ತರಾಗುವುದಂತೂ ನಿಜ. ಈಗ ನಮ್ಮ ಬಳಿಯಿರುವ ಒಂದೇ ಆಯ್ಕೆ ಅದಕ್ಕೆ ಹೊಂದಿಕೊಳ್ಳುವುದು. ಇಲ್ಲಿಯವರೆಗಂತೂ ಅವರದ್ದೇ ಎಲ್ಲಾ ಜವಾಬ್ದಾರಿಯಿತ್ತು, ಇನ್ನು ಮುಂದೆ ಸ್ವಲ್ಪವಾದರೂ ತೆಗೆದುಕೊಳ್ಳಬೇಕೆಂದು ನಿರ್ಧರಿಸುತ್ತಾ ಈ ಅಂಕಣವನ್ನು ಮುಗಿಸುತ್ತಿದ್ದೇನೆ.

Monday 5 March 2012

ಪ್ರಣವ ಪ್ರೇಮ ಪುರಾಣ(ಭಾಗ ೨ )

ಹಿಂದಿನ ಭಾಗದಲ್ಲಿ ...
             ಮೊದಲ ನೋಟದ ಪ್ರೇಮವೋ ಏನೋ ಪ್ರಣವನಂತೂ  ಸುವಿಧಾಳನ್ನು ಪ್ರೀತಿಸುತ್ತಾನೆ. ಪ್ರೀತಿಯನ್ನು ಒಪ್ಪದ ಹುಡುಗಿ ಅವನ ಪ್ರೀತಿಯನ್ನು ಪರೀಕ್ಷಿಸಬಯಸುತ್ತಾಳೆ ಅದರಲ್ಲಿ ಅವನಷ್ಟರ ಮಟ್ಟಿಗೆ ಅವನು ಯಶಸ್ವಿಯೇ ಆಗುತ್ತಾನೆ. ಆದre ವಿಧಿಯ ಲೆಕ್ಕಾಚಾರವೇ ಬೇರಿತ್ತು ಎಂಬುದು ಪ್ರಣವನಿಗೆ ಹೊಳೆದು ಹತಾಶನಾಗುತ್ತಾನೆ. ಈ ಸನ್ನಿವೇಶದಿಂದ ಮುಂದಕ್ಕೆ   ಸುವಿಧಾ ತನ್ನ ಕತೆಯನ್ನು ವಿವರಿಸುತ್ತಾಳೆ. ಹಿಂದಿನ ಭಾಗವನ್ನು ಒಮ್ಮೆ ಓದಿ ನೋಡಿ
http://subrahmanyahegde.blogspot.in/2012/02/blog-post_25.html


ಸುವಿಧಾ ಹೇಳಿದಂತೆ:
ನನ್ನ ಕಥೆಯೇನೂ ಬಹಳ ವಿಭಿನ್ನವಾಗಿರಲಿಲ್ಲ. ಅಲ್ಲಿ ಹಾಗೆ ಅವನ ಮುಖಕ್ಕೆ ಹೊಡೆದ ಹಾಗೆ ಹೇಳಬೇಕೆಂದು ಮೊದಲೇ ನಿರ್ಧರಿಸಿಕೊಂಡಿದ್ದರಿಂದಲೇ ಅಷ್ಟು ಹೇಳಬಲ್ಲವಳಾಗಿದ್ದೆ. ಆದರೆ ತಾನು ಹೇಳಿದ್ದೆಲ್ಲಾ ಸತ್ಯವೇ? ಹೇಳುವಷ್ಟು ಪ್ರೌಢಿಮೆ, ಅದಕ್ಕಿಂತ ಹೆಚ್ಚಾಗಿ ಅವಶ್ಯಕತೆ ನಿಜವಾಗಿಯೂ ತನಗೆ ಇತ್ತೇ? ಉಳಿದ ಕಾರಣಗಳೆಲ್ಲಾ ಸುಳು ಸುಳ್ಳೇ ಒಂದು ಮುಖ್ಯ ಕಾರಣದ ಸುತ್ತ ತಾನೇ ಕೊಟ್ಟುಕೊಂಡ ಸಮರ್ಥನೆಗಳಷ್ಟೇ ಅಲ್ಲವೇ? ಆದರೆ ತನಗೇಕೆ ಅವನ ಎದುರಲ್ಲಿ ಹಾಗೆ ಎಲ್ಲೂ ಇಲ್ಲದ ಉದ್ವೇಗ ಬರುವುದು? ಯಾಕೆ ಹಾಗೆ ಬುದ್ಧಿಯ ಕಟ್ಟಪ್ಪಣೆಯನ್ನು ಮೀರಿ ಅವನ ಜೊತೆಗೆ ಮಾತನಾಡುವ ಬಯಕೆ ಮನಸ್ಸಿನಲ್ಲಿ ಹುಟ್ಟುವುದು? ಎಷ್ಟು ಅವಿತಿಟ್ಟುಕೊಳ್ಳಲು ನೋಡಿದರೂ ಆ ಕಿರುನಗೆ ಏಕೆ ಹೊರಗಿಣುಕುವುದು? ಯಾಕದು ಆ ಅಸ್ವಾಭಾವಿಕ ಪ್ರಸನ್ನತೆ ಮೂಡುವುದು? ಆದರೆ ಅಕ್ಕ? ಅವಳು ಹಾಗೆ ನಿದ್ದೆಮಾತ್ರೆಗಳನ್ನು ಲೆಕ್ಕವಿಡದೆ ನುಂಗಿ ಕೋಮಾಕ್ಕೆ ಹೋಗಿ ಕುಳಿತಾಗ, ಕೋಮಾದಿಂದ ಹೊರಬಂದಾದ ಮೇಲೂ ಬುದ್ಧಿಸ್ಥಿಮಿತದಲ್ಲಿಲ್ಲದೇ ಒಂದು ವರ್ಷ ಒದ್ದಾಡಿದಾಗ, ದಿನಂಪ್ರತಿ ಕೇಶವಚಂದ್ರ ಜೋಷಿಯ ವಂಶಕ್ಕೆಲ್ಲಾ ಶಾಪ ಹಾಕಿರಲಿಲ್ಲವೇ? ಅವಳಿಗೆ ಚಿಕಿತ್ಸೆ ಮಾಡಲು ಬರುತ್ತಿದ್ದ ಶ್ರೀಧರ್ ಡಾಕ್ಟರ್ರೇ ಪ್ರೀತಿ ಪ್ರೀತಿ ಎಂದು ಕನವರಿಸುತ್ತಿದ್ದ ಇವಳನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮದುವೆಯಾಗಿದ್ದರಿಂದ ಇಂದು ಅವಳು ಮನುಷ್ಯರ ತರಹ ಬದುಕಿದ್ದಾಳೆ, ಅಷ್ಟೇ! ಅಕ್ಕ ಹಾಗಾಗಿ ಒಂದಿಡೀ ವರ್ಷ ಆ ನೋವಿನಲ್ಲಿ ನಲುಗಲು ಅವನ ಕಸಿನ್ ಕಾರಣ ಎಂಬ ವಿಷಯ ನನ್ನಲ್ಲಿ ಪ್ರ‍ೇಮ ಎಂಬುದರ ಬಗ್ಗೆಯೇ ವಾಕರಿಕೆ ಹುಟ್ಟು ಹಾಕಿತ್ತು.  ಪ್ರಣವನ ಪರಿಚಯವಾಗಿ, ಯಾಕೋ ಇವನು ಗೆಳೆಯನಾಗಷ್ಟೇ ಉಳಿಯಲಾರ ಎನಿಸಿದ ನಂತರ ಒಂದು ದಿನ ಅವನ ಬಗ್ಗೆ ವಿಚಾರಿಸುತ್ತಿರುವಾಗ ಆಕಸ್ಮಿಕವಾಗಿ ಸಿಕ್ಕ ಆ ಮಾಹಿತಿ, ಇವನ ಬಗ್ಗೆ ಒಂದು ತಿರಸ್ಕಾರಭರಿತ ಉಪೇಕ್ಷೆಗೆ ದಾರಿ ಮಾಡಿಕೊಟ್ಟಿತ್ತು. ಅದಾದ ಮೇಲೆ ಅದೆಷ್ಟು ಬಾರಿಯೋ ಹತ್ತಿಕ್ಕಿಕೊಂಡ ಹೃದಯದ ಭಾವನೆಗಳು ಅವಕಾಶ ಸಿಕ್ಕಿದಾಗಲೆಲ್ಲ ಭುಗಿಲೆದ್ದು ಮನಸ್ಸಿನ ಆದೇಶದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದವು. ಎಷ್ಟೋ ಸಲ ರೋಸಿ ಹೋಗಿ ಇದೆಲ್ಲ ಒಪ್ಪಿಕೊಂಡುಬಿಡಲಾ ಎನಿಸಿದ್ದೂ ಹೌದು. ಆದರೆ ಒಂದು ಸಲಕ್ಕೆ ಅಕ್ಕನ ನೆನಪಾದಾಗ ಇದೆಲ್ಲಾ ವ್ಯಭಿಚಾರ ಎನಿಸುತ್ತಿತ್ತು. ಯಾವುದು ಸರಿ ಯಾವುದು ತಪ್ಪು ಎನ್ನುವ ಗೊಂದಲದಲ್ಲಿ ಎಷ್ಟೋ ರಾತ್ರಿಗಳು ಹೇಳಹೆಸರಿಲ್ಲದಂತೆ ಕಳೆದುಹೋದವು.
ಹೀಗೇ ದಿನಗಳು ಉರುಳುತ್ತಿದ್ದವು. ನಾಲ್ಕು ತಿಂಗಳಾಗಿದ್ದವೆಂದು ಕ್ಯಾಲೆಂಡರ್ ಹೇಳುತ್ತಿತ್ತು. ಅದೊಂದು ಭಾನುವಾರ ಅಕ್ಕನ ಮನೆಗೆ ಹೀಗೇ ಹೋಗಿದ್ದೆ. ಅವರ ಮನೆಯಲ್ಲಿ ಯಾರೋ ಅತಿಥಿಗಳಿದ್ದರು ಎಂದು ಮನೆಯ ಬಾಗಿಲಿನಲ್ಲಿದ್ದ ಶೂಗಳೇ ಹೇಳುತ್ತಿದ್ದವು. ನಾನು ಒಳಹೊಕ್ಕೊಡನೆಯೇ ಭಾವ, " ಇವಳು ಶಾರ್ವರಿಯ ತಂಗಿ, ಸುವಿಧಾ ಎಂದು PESITನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ, ಇವರು ಕೇಶವಚಂದ್ರ ಶಾಸ್ತ್ರಿ  ಎಂದು ಸುವಿಧಾಳ ಕ್ಲಾಸ್ ಮೇಟು. ಯು. ಎಸ್. ನಲ್ಲಿ ಇರುತ್ತಾರಂತೆ. ... " ಇನ್ನೂ ಏನೋ ಹೇಳಲು ಹೋಗುತ್ತಿದ್ದರು. ಆಗ ಕೇಶವಚಂದ್ರ ರವರೇ, " ಓ, PESIT ತಾನೇ, ನಮ್ಮ ಪ್ರಣವ್ ಗೊತ್ತಿರಬೇಕಲ್ಲಾ, ನನಗೆ ಕಸಿನ್ ಆಗಬೇಕು ಅವನು. ನಮ್ಮ ಮನೆಯಲ್ಲಿಯೇ ಆಡಿಕೊಂಡಿದ್ದವನು..." ಇನ್ನೂ ಏನೇನೋ ಹೇಳುತ್ತಿದ್ದರು. ನನಗೆ ಕೇಳುತ್ತಿರಲಿಲ್ಲ. ಇವರು ಇಲ್ಲಿಗೆ ಮನೆಗೆ ಬಂದೂ, ಅಕ್ಕ ನಗುನಗುತ್ತಿದ್ದಾಳೆ ಎಂದರೆ ಅಕ್ಕನಿಗೆ ಮೋಸ ಮಾಡಿದಾತ ಈತನಲ್ಲ. ಹಾಗಾದರೆ ಏನೋ ಒಂದು ಗಜಿಬಿಜಿಯಾಗಿದೆ ನನ್ನ ಲೆಕ್ಕಾಚಾರದಲ್ಲಿ ಎಂದುಕೊಂಡಳು. ತಕ್ಷಣ "ಇವತ್ತು ನನ್ನ ಪ್ರಾಜೆಕ್ಟ್ ಗ್ರುಪಿನ ಮೀಟಿಂಗ್ ಇದೆ ಭಾವ, ನಾನು ಮರೆತು ಬಿಟ್ಟಿದ್ದೆ" ಎಂದವಳೇ ಮನೆಯತ್ತ ಸ್ಕೂಟಿಯನ್ನು ತಿರುಗಿಸಿದ್ದಳು. ಮನೆಗೆ ಬಂದು ಅಕ್ಕ ತವರಿನಲ್ಲೇ ಬಿಟ್ಟು ಹೋಗಿದ್ದ ಒಂದಿಷ್ಟು ಡೈರಿಗಳನ್ನು ತೆಗೆದು ನೋಡಿದರೆ ಅದರಲ್ಲಿ ಎಲ್ಲ ಕಡೆ ಇದ್ದಿದು ಬರೀ ಕೇಶವಚಂದ್ರ ಎಂದು ಮಾತ್ರ. ಹಾಗಾದರೆ ಈ ಪ್ರಣವ್ ನ ಕಸಿನ್ ಯಾರು ? ಮತ್ತೊಂದು ಗೊಂದಲ ತಲೆಯಲ್ಲಿ ಸೇರಿ ಮಾರನೆಯ ಸೋಮವಾರದ ಬೆಳುಗನ್ನೇ ಕಾಯುತ್ತಾ ಕುಳಿತಳು.
ಬೆಳಿಗ್ಗೆಯ ತಿಂಡಿಯನ್ನೂ ತಿನ್ನದೇ ಕಾಲೇಜಿಗೆ ಓಡಿದವಳಿಗೆ,ಕಾಲೇಜು ಮುಟ್ಟಿದ ಮೇಲೆಯೇ, ಕಾಲೇಜು ಆಫೀಸು ತೆಗೆಯುವುದು ೯ ಗಂಟೆಗೆ ಎಂಬ ನೆನಪಾಗಿದ್ದು. ಗಡಿಯಾರ ನೋಡಿದರೆ ೭.೪೫. ಹತ್ತಿರದಲ್ಲೇ ಇದ್ದ ಅಕ್ಕನ ಮನೆಗೆ ಹೋದರಾಯಿತೆಂದು ಸ್ಕೂಟಿ ತಿರುಗಿಸುವುದರೊಳಗೆ ಪ್ರಣವನನ್ನು ಗೇಟಿನಲ್ಲಿ ಕಂಡಂತಾಯಿತು.  ಇವಳ ಮುಖದಲ್ಲಿ ಕಿರುನಗೆ ಯಾವುದೇ ಅಡೆತಡೆಯಿಲ್ಲದೇ ಹೃತ್ಪೂರ್ವಕವಾಗಿ ಬಂದಿತ್ತು. ಯಾಕೋ ಅವನು ನಗೆಯನ್ನು ಹೊರತರಿಸಲು ಅನುಮಾನ ಪಟ್ಟನೇ? ಎದುರು ಬರುತ್ತಿದ್ದಾತ ಬೇಕೆಂದೇ ಪಕ್ಕಕ್ಕೆ ಸರಿದು ಹೋದಂತಾಗಿ, ’ಹಗ್ಗ ಹರಿಯುತ್ತಿದೆಯೇ ಪ್ರಭುವೇ?’ ಎನ್ನಿಸಿತು. ಏನೇ ಇರಲಿ, ಎಂದು ಅಕ್ಕನ ಹೊಸಕೆರೆಹಳ್ಳಿಯ ಮನೆಯ ಕಡೆ ಸ್ಕೂಟಿಯನ್ನು ತಿರುಗಿಸಿದೆ. ಅಲ್ಲಿ ಹೋದರೆ ಮತ್ತೆ ಅದೇ ಕೇಶವಚಂದ್ರ ಶಾಸ್ತ್ರಿ ನ ದರ್ಶನ. ಆತ ನನ್ನದೇ ವಿಳಾಸ ಹುಡುಕಿಕೊಂಡು ಬಂದಿದ್ದರಂತೆ. ನಾನು ಸಿಕ್ಕಿದಾಗ ಬಹಳವೇ ಖುಷಿಯಾಗಿದ್ದು ಮುಖದಲ್ಲಿಯೇ ತಿಳಿಯುತ್ತಿತ್ತು.
ನನ್ನನ್ನು ಮನೆಯಿಂದ ಸ್ವಲ್ಪ ಹೊರಕ್ಕೆ ಕರೆದುಕೊಂಡು ಹೋಗಿ ಅವರು ಕೇಳಿದ್ದಿಷ್ಟೇ, " ನಿನಗೆ ನಮ್ಮ ಪ್ರಣವ್ ಗೊತ್ತೇ? ಅವನು ನಿಮ್ಮದೇ ಡಿಪಾರ್ಟ್ ಮೆಂಟ್, ನಿನಗೆ ಒಂದು ವರ್ಷಕ್ಕೆ ಸೀನಿಯರ್.ಆಗಬೇಕು"
ನಾನು, " ಗೊತ್ತಿರುವುದೇನು, ನಾನೂ ಮತ್ತೂ ಅವನು ವರ್ಷವಿಡೀ ಡ್ಯಾನ್ಸ್ ಪಾರ್ಟ್ನರ್ಸ್ ಆಗಿದ್ವಿ, ಚನ್ನಾಗಿಯೇ ಗೊತ್ತಿದೆ. ಇತ್ತೀಚೆಗೆ ಎಲ್ಲಿಯೂ ಸಿಕ್ಕುತ್ತಿಲ್ಲ,  ಅವನು ಕ್ಲಾಸಿಗೆ ಸಹ ಸರಿಯಾಗಿ ಬರುತ್ತಿಲ್ಲ ಎಂದು ಯಾರೋ ಹೇಳುತ್ತಿದ್ದ ನೆನಪು" ಹೇಳಬೇಕಿದ್ದರೆ ಮನದಲ್ಲಿದ್ದ ಬೇಸರವನ್ನು, ಕಾತರಿಕೆಯನ್ನು ಮಾತಿನಲ್ಲಿ ತೋರಿಸಬಾರದೆಂದು ಬಹಳೇ ಪ್ರಯತ್ನಪಟ್ಟೆ. "ಅವನೇನಾದರೂ ಸರಿಯಾಗಿರದೇ ಇದ್ದರೆ ಅದಕ್ಕೆ ನಾನೇ ಕಾರಣ" ಎಂದು ಬಾಯ್ತುದಿಯವರೆಗೆ ಬಂದ ಮಾತನ್ನು ಅಲ್ಲಿಯೇ ತಡೆದು ನಿಲ್ಲಿಸಿದೆ. ಆದರೂ ಹೀಗೆ ನನ್ನನ್ನೇಕೆ ವಿಚಾರಿಸುತ್ತಿದ್ದಾರೆ ಎಂದು ಖಚಿತವಾಗಿ ತಿಳಿಯದೇ ಪ್ರಣವನೇನಾದರೂ ಎಲ್ಲವನ್ನೂ ಹೇಳಿಬಿಟ್ಟಿರುವನೇ ಎಂಬ ಅನುಮಾನ ಬಂತು. ಸ್ವಾಭಿಮಾನಿ ಪ್ರಣವ್ ಹೀಗೆ ತನ್ನ ರಾಯಭಾರ್ಯಕ್ಕೆ ಇನ್ನೊಬ್ಬರನ್ನು ಕಳಿಸುವುದು ಸಾಧ್ಯವಿಲ್ಲವೆನಿಸಿತು.
"ಹೌದಮ್ಮಾ, ಈಗೀಗ ಏನೂ ಸರಿಯಾಗಿ ಮಾಡುತ್ತಿಲ್ಲ ಅವನು, ಆ ತರಹದ ಆಗರ್ಭ ಶ್ರೀಮಂತನಾಗಿ ಯಾವುದೋ ಒಂದು ರೂಮು ಮಾಡಿಕೊಂಡಿರುತ್ತೇನೆ ಎಂದ, ಏನೋ ಅವನ ಇಷ್ಟ ಎಂದು ಬಿಟ್ಟಾಯ್ತು. ಈಗ ನೋಡಿದರೆ ಪಕ್ಕಾ ದೇವದಾಸ್ ತರಹ ಆಗಿಹೋಗಿದ್ದಾನೆ. ಯಾವುದರಲ್ಲಿಯೂ ಆಸಕ್ತಿ ಇಲ್ಲದವರ ತರಹ. ಆ ಗಡ್ಡ ನೋಡಿದರೇ ತಿಳಿಯುತ್ತದೆ ಏನೋ ಸರಿಯಿಲ್ಲ ಎಂದು. ಅವನೇನಾದರೂ ಪ್ರೀತಿ ಗೀತಿಯಲ್ಲಿ ಬಿದ್ದಿದ್ದಾನೆಯೇ? ಕಾಲೇಜಿನಲ್ಲೇನು ಸುದ್ದಿಯಿದೆಯೇ? ಗೊತ್ತಿದ್ದರೆ ಹೇಳಮ್ಮಾ! ಅವನು ಏನು ಬೇಕೆಂದರೆ ಅಪ್ಪ ಅಮ್ಮ ತಲೆಯ ಮೇಲೆ ಹೊತ್ತು ಮಾಡುತ್ತಾರೆ, ಆದರೆ ಕೇಳುವ ಅಭ್ಯಾಸವಲ್ಲ ಅವಂದು. ಮಗನ ಸ್ಥಿತಿಯನ್ನು ನೋಡಲಾರದೇ ನೋಯುತ್ತಿದ್ದಾರೆ. ನಾನು ನಿನ್ನನ್ನು ನಿನ್ನೆ ಭೇಟಿಯಾಗಿದ್ದರಿಂದ ನಿನಗೇನಾದರೂ ಗೊತ್ತಿರಬಹುದು ಎಂದು ನಿನ್ನನ್ನರಸುತ್ತಿದ್ದೆ"
ನನಗೆ ಏನೋ ಒಂದು ರಿಲೀಫ಼್ ಸಿಕ್ಕಂತಾಯ್ತಾದರೂ, ನನ್ನ ಮೂಲಭೂತ ಸಂದೇಹ ಇನ್ನೂ ಬಗೆಹರಿದಿರಲಿಲ್ಲ, ಅದಕ್ಕಾಗಿಯೇ"ಆಯ್ತು ಅದರ ಚಿಂತೆ ನನಗೆ ಬಿಡಿ, ನಾನು ಅದನ್ನೆಲ್ಲ ವಿಚಾರಿಸಿಕೊಳ್ಳುತ್ತೇನೆ. ಆದರೆ ಒಂದು ವಿಚಾರ ನಿಮ್ಮ ಕ್ಲಾಸಿನಲ್ಲಿ ಕೇಶವಚಂದ್ರ ಜೋಷಿ ಎಂದು ಒಬ್ಬನಿದ್ದನೇ? "ಎಂದು ಕೇಳಬೇಕಿದ್ದರೆ ನನ್ನ ಎದೆಬಡಿತ ನನಗೇ ಕೇಳುತ್ತಿತ್ತು. ಅವರು ಹೌದೆನ್ನಲಿ ಎಂದು ಮನಸ್ಸು ಎಂದೂ ನಂಬದ ದೇವರನ್ನು ಬೇಡುತ್ತಿತ್ತು.
ಆ ಹೆಸರು ಕೇಳಿದೊಡನೆಯೇ ಅವರ ಮುಖದ ಭಾವನೆಗಳು ಗಮನೀಯ ಎನ್ನುವ ಮಟ್ಟಿಗೆ ಬದಲಾದವು. " ಹೌದು, ಆ ಹೆಸರಿನ ಒಬ್ಬ ಲೋಫ಼ರ್ ಇದ್ದ. ಅವನೇ ನಿಮ್ಮಕ್ಕನಿಗೆ ಮೋಸ ಮಾಡಿದ್ದು. ಈಗ ಅದಕ್ಕಾಗಿ ಅನುಭವಿಸುತ್ತಿದ್ದಾನೆ, ಅವನಿಗೆ ಬ್ಲಡ್ ಕ್ಯಾನ್ಸರ್ ಇದೆಯಂತೆ" ನನಗೆ ಮತ್ತೇನೂ ಕೇಳಿರಲಿಲ್ಲ, ಕೇಳಬೇಕಾಗೂ ಇರಲಿಲ್ಲ, ಕೇಳಬೇಕೆಂದೆನಿಸಿರಲೂ ಇಲ್ಲ. ನಾನು ಒಂದು ಖುಷಿಯ ಸಿಳ್ಳೆ ಹಾಕಿಕೊಂಡು ಕಾಲೇಜಿನತ್ತ ಪ್ರಣವ್ ನನ್ನು ಭೇಟಿಯಾಗಲು ಹೊರಟೆ.